PLEASE LOGIN TO KANNADANET.COM FOR REGULAR NEWS-UPDATES





ಗಂಗಾವತಿ: ರಾಜ್ಯದಲ್ಲಿ ಪ್ರತಿಭಾನ್ವಿತರಿಗೇನು ಕೊರತೆಯಿಲ್ಲ. ಆದರೆ ಸೌಲಭ್ಯದ ಕೊರತೆಯಿಂದಾಗಿ ಹಲವು ಪ್ರತಿಭೆಗಳು ಪರರಾಜ್ಯಗಳಿಗೆ ವಲಸೆ ಹೋಗಿ ನೆಲೆ ಕಂಡುಕೊಳ್ಳುವಂತಾಗಿದೆ. ಚಿತ್ರಕಲೆಯಲ್ಲಿ ಮಾಸ್ಟರ್ ಆಫ್ ಫೈನ್‌ಆರ್ಟ್ ಪದವಿ ಪೂರ್ಣಗೊಳಿಸಿರುವ ಭೀಮರಾಯ ದೇವಿಕೇರಿ ಅಂತಹವರಲ್ಲೊಬ್ಬರು.
ಸದ್ಯಕ್ಕೆ ಮುಂಬೈನ ಗ್ಯಾಲರಿ ಬಿಯಾಂಡ್ ಎಂಬ ಚಿತ್ರಕಲಾ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರುವ ಈ ಪ್ರತಿಭಾನ್ವಿತ ಚಿತ್ರಕಲಾವಿದ ಮಾಸ್ಟರ್ ಆಫ್ ಫೈನ್‌ಆರ್ಟ್ ಪದವಿ ಪೂರ್ಣಗೊಳಿಸಿದ್ದು, ಗುಲ್ಬರ್ಗಾದ ಐಡಲ್ ಫೈನ್‌ಆರ್ಟ್ ವಿಶ್ವವಿದ್ಯಾಲಯದಲ್ಲಿ ೨೦೦೭ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದುಕೊಂಡಿರುವ ಈ ಕಲಾವಿದನಿಗೆ ಯುತ್ ಫೆಸ್ಟಿವೆಲ್ ಕಾಂಪಿಟೇಷನ್‌ನ ಕ್ಲೇ ಮಾಡೆಲ್ ಆರ್ಟ್ನಲ್ಲಿ ಬಂಗಾರ ಪದಕ ದೊರೆತಿರುವುದು ಈತನ ಪ್ರತಿಭೆಗೆ ಕನ್ನಡಿ.
ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪಿನ ನಿವಾಸಿಯಾಗಿರುವ ಈ ಯುವಕ ಪ್ರಸ್ತುತ ಮುಂಬೈ ವಾಸವಾಗಿದ್ದರೂ ಈತನ ಕಲಾಕೃತಿಗೆ ಸ್ಥಳೀಯ ಹಳ್ಳಿ ವಾತಾವರಣ, ಗುಡ್ಡಗಾಡು, ಅಲೆಮಾರಿ ಜನಾಂಗ, ಗೂಳಿ, ಟೆಗರು ಮುಂತಾದವುಗಳು ಸ್ಫೂರ್ತಿಯಂತೆ. ಕವಿಗಳು ಕೆಲವೊಮ್ಮೆ ನಿಸರ್ಗ, ಸೌಂದರ್ಯ, ವಾಸ್ತವತೆಯನ್ನು ವರ್ಣಿಸುವಾಗ ಭಾವೋದ್ವೇಗತೆಯಲ್ಲಿ ಉತ್ಪ್ರೇಕ್ಷಗಳನ್ನು ಕಾಣಬಹುದು. ಆದರೆ ಕಲಾವಿದನ ಕುಂಚದಲ್ಲಿ ಅರಳುವ ಕಲೆಯಲ್ಲಿ ಪ್ರತಿಯೊಂದು ವಾಸ್ತವಕ್ಕೆ ಹತ್ತಿರವಾಗಿರಬೇಕಾಗುತ್ತದೆ ಎಂಬುದು ಈ ಯುವಕನ ಅಭಿಪ್ರಾಯವಾಗಿದೆ. ಅಂತೆಯೇ ಕೂಡ ತನ್ನ ಚಿತ್ರಕಲೆಯಲ್ಲಿ ಮುಂಬೈ ತಾಜ್ ಪ್ರಕರಣದಿಂದ ಹಳ್ಳಿಯ ಬಡತನದ ವಾಸ್ತವ ಸ್ಥಿತಿಗಳಿಗೆ ಕೈಕನ್ನಡಿಯಿಡಿದಂತೆ ಬಿಂಬಿಸುವುದು ಈತನ ಕಲೆಯಲ್ಲಿನ ವಿಶೇಷತೆ. ಕೇವಲ ಚಿತ್ರಕಲೆಯಲ್ಲಿ ಮಾತ್ರವಲ್ಲದೇ ಆಂಬೋಸಿಂಗ್, ಕ್ಲೇಆರ್ಟ್, ಟೆರಾಕೋಟ, ಮರಳು ಶಿಲ್ಪ, ಕೆತ್ತನೆ ಸೇರಿದಂತೆ, ಗ್ರಾಮೀಣರ ದೈನಂದಿನ ಬದುಕಿನ ಕುರಿತು ವಿಡಿಯೋ ಆರ್ಟ್ ಡಾಕ್ಯುಮೆಂಟರಿ ತಯಾರಿಸುತ್ತಿರುವ ಈತ ಫೋಟೋಗ್ರಾಪಿಯಲ್ಲೂ ಉತ್ತಮ ನೈಪುಣ್ಯತೆ ಹೊಂದಿದ್ದು, ಎಲ್ಲಾ ಕಲೆಗಳಲ್ಲೂ ಪರಿಣಿತನಾಗಿರುವ ಈತನಿಗೆ ಸ್ಥಳೀಯ ಸಂಘ-ಸಂಸ್ಥೆಗಳ ಮತ್ತು ಸರ್ಕಾರದ ಸಹಕಾರ ಸಿಕ್ಕಲ್ಲಿ ತವರಲ್ಲಿ ನೆಲೆಸಿ ಇಲ್ಲಿನ ಸಂಸ್ಕೃತಿಯನ್ನು ದೇಶ-ವಿದೇಶಗಳಲ್ಲಿ ಪ್ರಚಾರಪಡಿಸುವ ಆಶಯ ಹೊಂದಿದ್ದಾನೆ.
ಸುಮಾರು ೩೦ ವರ್ಷಗಳಿಂದ ಹಂಪಿಯಲ್ಲಿ ವಾಸಿಸುತ್ತಿರುವ ಪ್ರಸಿದ್ಧ ವಿದೇಶಿ ಚಿತ್ರಗಾರ ರಾಬರ್ಟ್ ಈತನ ಚಿತ್ರಕಲೆಗೆ ಮಾರುಹೋಗಿ ತನ್ನ ಆರ್ಟ್ ಗ್ಯಾಲರಿಯನ್ನು ಈತನಿಗಾಗಿ ಬಿಟ್ಟುಕೊಡಲು ಮುಂದಾಗಿದ್ದನ್ನು ನೆನೆಸಿಕೊಳ್ಳುವ ಈತನ ಕಣ್ಣಾಲಿಗಳಲ್ಲಿ ನೀರಾಡುತ್ತವೆ. ಇದೇ ತಿಂಗಳ ೭ರಂದು ಬೆಂಗಳೂರಿನ ಪ್ರಸಿದ್ಧ ಜೆನೆಸಿಸ್ ಆರ್ಟ್ ಗ್ಯಾಲರಿ ಪ್ರಸಿದ್ಧ ಚಿತ್ರಕಲಾವಿದರ ತಂಡದೊಂದಿಗೆ ಕಿರಿಯ ಚಿತ್ರಕಲಾವಿದನನ್ನಾಗಿ ಗುರುತಿಸಿ ಈತನ ಚಿತ್ರಪ್ರದರ್ಶನವನ್ನು ಬೆಂಗಳೂರಿನ ಜಯನಗರದಲ್ಲಿ ಹಮ್ಮಿಕೊಂಡಿದೆ. ಆಸಕ್ತರು ಹೆಚ್ಚಿನ ಕಲಾಕೃತಿಗಾಗಿ ತಿತಿತಿ.gಚಿಟಟeಡಿಥಿbeಥಿoಟಿಜ.iಟಿ ಗೆ ಒಮ್ಮೆ ಅಂತರ್ಜಾಲದಲ್ಲಿ ಭೀಮರಾಯ ಎಂದು ಕ್ಲಿಕ್ಕಿಸಿದರೆ ಸಾವಿರಾರು ಅತ್ಯಾಕರ್ಷಕ ಚಿತ್ರಕಲೆಗಳು ದೊರೆಯುತ್ತವೆ.
ಒಟ್ಟಿನಲ್ಲಿ ಹೈದ್ರಾಬಾದ್-ಕರ್ನಾಟಕದ ಗ್ರಾಮೀಣ ಪ್ರತಿಭೆಯೊಂದು ಪಕ್ಕದ ಮಹಾರಾಷ್ಟ್ರದಲ್ಲಿ ಉತ್ತಮ ಚಿತ್ರಕಲಾವಿದನಾಗಿ ಪ್ರಸಿದ್ಧಿ ಪಡೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ರಾಜ್ಯಸರ್ಕಾರ ಒಮ್ಮೆ ಇಂತಹ ಪ್ರತಿಭೆಗಳತ್ತ ಗಮನ ಹರಿಸಿದರೆ ನಾಡಿನ ಇನ್ನೂ ಅನೇಕ ಪ್ರತಿಭೆಗಳನ್ನು ಗುರುತಿಸಿ ಪ್ರತಿಭಾ ಪಾಲಾಯನ ತಡೆಗಟ್ಟಬಹುದಾಗಿದೆ.

Contact Artist : Bheemaraya Devikeri on Mob: 09096218576, 9482366742



Advertisement

0 comments:

Post a Comment

 
Top